ಶ್ರೀ ಗುರುರಾಯರ 916 ನೇ ಭಜನೆ

ಶ್ರೀ ಗುರುರಾಯರ 916 ನೇ ಭಜನೆ


ಇರುಳಲ್ಲಿ ಮರುಳಲ್ಲಿ ನಡೆಯುತ
ಸೋತು ಸುಣ್ಣಾಗಿರುವೆ ಪ್ರಭುವೆ
ಕೈಹಿಡಿದೆನ್ನ ಮುನ್ನಡೆಸುವ ತಂದೆ
ನೀ ಕಾಣದೆ ಬೆಂದು ಹೋಗಿರುವೆ.      |ಪ|

ಕಾಲಚಕ್ರದ ಸೆಳೆವಲಿ ಸಿಲುಕಿರುವ
ಬದುಕಿನ ಪರಿ ನೀನರಿಯೆಯೇನು
ಎನ್ನ ನರಳುವ ಬದುಕಿನ ನೋಟ
ನಿನ್ನ ಕಣ್ಣಿಗೆ ಪ್ರಭುವೆ ಕಾಣದೇನು.       |1|

ಒಮ್ಮೊಮ್ಮೆ ಮಿಂಚು ಗುಡುಗಿನಲಿ
ಬದುಕೇ ನಡುಗಿ ಹೋಗಿದೆಯಲ್ಲ
ಅದನೆದುರಿಸುವ ಧೈರ್ಯ ಸಾಲದೆ
ನಿನ್ನ ಮೊರೆಹೋದೆ ಪೊರೆವೆಯಲ್ಲ.     |2|

ಕೈಕಾಲು ಧೃಢತೆಯನೇ ಕಳೆದಂತೆ
ಎನ್ನ ಎದೆಯಲ್ಲಿ ನಡುಕ ಹುಟ್ಟಿಸಿದೆ
ನನ್ನೆದೆಯ ವೃಂದಾವನಕೆ ತಂದೆಯೆ
ನೀನು ಬರುವ ಹಾದಿಯನೇ ಕಾಯ್ದೆ.      |3|

ಒಂದೊಂದು ಕ್ಷಣದಲ್ಲಿ ತುಂಬಿರುವ
ನೋವಿನ ಪರಿಯನು ಸಹಿಸದಾದೆ
ಪ್ರಭು ರಾಘವೇಂದ್ರ ನಿನ್ನನು ಬಿಟ್ಟು
ಇನ್ನಾರನೂ ನಾನೀಗ ನಂಬದಾದೆ.         |4|

ರಚನೆ ಅಚ್ಯುತ ಕುಲಕರ್ಣಿ

Comments

Popular posts from this blog

स्वातंत्र्य दिवस की हार्दिक शुभकामनाएं

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು